Friday, August 5, 2011

ಬೆಟ್ಟದ ಜೀವ

ಡಾ|| ಕೆ. ಶಿವರಾಮ ಕಾರಂತರ ಬೆಟ್ಟದ ಜೀವ ಕೃತಿಯು ಪ್ರಪ್ರಥಮವಾಗಿ ನನಗೆ ಪರಿಚಯವಾದದ್ದು ಪಠೄದ ಮೂಲಕ. ಅನಿವಾರ್ಯವೆಂಬಂತೆ ಕಾದಂಬರಿಯನ್ನು ಓದಲು ಪ್ರಾರಂಭಿಸಿದವನಿಗೆ, ಅದರ ವಿವಿಧ-ವೈವಿಧ್ಯ ಅಂತರಾಳಗಳ ದರ್ಶನವನ್ನು ಮಾಡಿಸಿದವರು ನನ್ನ ಪೂಜ್ಯ ಗುರುಗಳಾದ ಡಾ|| ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರು. ಜ್ಞಾನಪೀಠ ಪ್ರಶಸ್ತಿ ಸನ್ಮಾನಿತರ ಕೃತಿಯೊಂದು ಸುಪ್ರಸಿದ್ಧ ವಿಮರ್ಶಕರಿಂದ ವ್ಯಾಖ್ಯಾನಗೊಳ್ಳುವುದನ್ನು ಆಲಿಸಿದ ನಾನೇ ಧನ್ಯನೆಂದು ಈಗ ಅರಿವಾಗುತ್ತಿದೆ. ಇದೇ ಕಾದಂಬರಿಯನ್ನು ಆಧರಿಸಿ ಚಲನಚಿತ್ರವೊಂದು ಕನ್ನಡದ ಬೆಳ್ಳಿ ಪರದೆಗೆ ಬರುತ್ತಲಿರುವ ಸಂಗತಿಯು ನನಗೆ ಹರ್ಷವನ್ನುಂಟುಮಾಡಿತ್ತು.

ಕಾದಂಬರಿಯು ಒಂದು ಸಾಹಿತ್ಯ ಪ್ರಕಾರವಾದರೆ, ಚಲನಚಿತ್ರವು ಪ್ರಭಾವೀ ಕಲಾ ಪ್ರಕಾರವಾಗಿದೆ. ಇವೆರಡೂ ಸಹ ತಮ್ಮದೇ ಆದ ರೀತಿಯಲ್ಲಿ ವೈವಿಧ್ಯವೆನಿಸಿಕೊಳ್ಳುವಂಥವು; ಅನ್ಯ ಪ್ರಕಾರದ ಕೃತಿಯನ್ನು ಚಲನಚಿತ್ರವಾಗಿಸುವುದು ಒಂದು ಸವಾಲೇ ಸರಿ. ಇಂಥಹ ಸವಾಲುಗಳು ನಿರ್ದೇಶಕ ಪಿ.ಶೇಷಾದ್ರಿಯವರಿಗೆ ಹೊಸತೇನಲ್ಲ! 'ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಚಲನಚಿತ್ರ' ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಬೆಟ್ಟದ ಜೀವ ಚಲನಚಿತ್ರವು, ಆ ಪ್ರಶಸ್ತಿಯ ಘನತೆಯನ್ನು ಉನ್ನತಕ್ಕೇರಿಸಿದೆ ಎಂದರೆ ಬಹುಶಃ ಆಭಾಸವಾಗಲಾರದು.

ಮೂಲ ಕಥೆಯ ಜಾಡನ್ನು ಎಲ್ಲಿಯೂ ತಪ್ಪದವರಂತೆ ಚಿತ್ರಕಥೆ ರಚಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಕಾರಂತರ ಸಾಹಿತ್ಯದ ಪರಿಚಯವಿಲ್ಲದಿದ್ದರೂ ಸಹ ಪ್ರೇಕ್ಷಕರನ್ನು ಚಿತ್ರವು ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿ, ಕಾದಂಬರಿಯ ಒಟ್ಟಾರೆ ಸಾರಕ್ಕೆ ಕಳಂಕ ಬಾರದಂತೆ ಚಿತ್ರಕಥೆಯು ತನ್ನದೇ ಧಾಟಿಯಲ್ಲಿ ಸಾಗಿ, ಮೆಚ್ಚುಗೆ ಗಳಿಸುತ್ತದೆ. ಚಲನಚಿತ್ರದ ಮತ್ತೊಂದು ವಿಶೇಷತೆ ಅದರ ತಾರಾಗಣ; ಗೋಪಾಲಯ್ಯನಾಗಿರುವ ದತ್ತಾತ್ರೇಯ, ಶಂಕರಮ್ಮನಾಗಿರುವ ರಾಮೇಶ್ವರಿ ವರ್ಮ ಹಾಗೂ ಶಿವರಾಮಯ್ಯನಾಗಿರುವ ಸುಚೇಂದ್ರ ಪ್ರಸಾದ್ ರವರುಗಳು ತಮ್ಮಗಳ ಪಾತ್ರದಲ್ಲಿ ಸಂಪೂರ್ಣ ಲೀನವಾಗಿಹೋಗಿದ್ದಾರೆ. ವಿ. ಮನೋಹರ್ ಅವರ ಸಂಗೀತ ಸಂಯೋಜನೆಯು ಪ್ರತ್ಯೇಕಿಸಲಾಗದಂತೆ ಚಲನಚಿತ್ರದುದ್ದಕ್ಕೂ ಹಾಸುಹೊಕ್ಕಾಗಿದೆ. ಅತ್ಯಂತ ಸಮಂಜಸವೆಂಬಂತೆ ರಚಿಸಲಾಗಿರುವ ಸಂಭಾಷಣೆಗಳು, ನೇರವಾಗಿ ಕಾದಂಬರಿಯ ಪುಟ-ಸಾಲುಗಳನ್ನು ನೆನಪಿಸುವಂತಿವೆ.

'ಬೆಳಗಾಗುವಾಗ ಕಂಗಿನ ಮರಗಳೆಲ್ಲ ನೀಳ ಅಂಗನೆಯರಂತೆ ಮಂಜಿನ ಸೀರೆಯನ್ನುಟ್ಟು ನಿಂತಿದ್ದವು' - ಕಾರಂತರು ಈ ರೀತಿ ಬಣ್ಣಿಸುವ ಮಲೆನಾಡಿನ ಸೊಬಗನ್ನು ಯಥಾವತ್ತಾಗಿ ಸೆರೆಹಿಡಿಯುವಲ್ಲಿ ಛಾಯಾಗ್ರಾಹಕರಾದ ಅನಂತ್ ಅರಸ್ ಗೆದ್ದಿದ್ದಾರೆ. ಬರವಣಿಗೆಯಲ್ಲಿ ಕಾರಂತರು ಸೃಷ್ಟಿಸಿರುವ ಕೆಳಬೈಲು ಹಾಗೂ ಕಾಟುಮೂಲೆಗಳನ್ನು ಇಂದಿಗೂ ಸಹ ನೈಜವಾಗಿ ಚಿತ್ರೀಕರಿಸಿರುವುದು ವಿಸ್ಮಯವೆನಿಸುತ್ತದೆ; ಕುಮಾರ ಪರ್ವತದ ಸೊಬಗಿನ ಚಿತ್ರೀಕರಣ ಅಮೋಘವಾಗಿದೆ.

ಮೂಲತಃ ಸಂಬಂಧಗಳ ಸುತ್ತಲೂ ಹೆಣೆದುಕೊಳ್ಳುವ ಕಥೆಯಲ್ಲಿ, ಪರಕೀಯವೆನಿಸಿಕೊಳ್ಳದಂತೆ ಭಾವನೆಗಳನ್ನು ಸೂಕ್ಷ್ಮವಾಗಿ ಚಿತ್ರೀಕರಿಸಿರುವುದು ನಿರ್ದೇಶಕರ ಯಶಸ್ಸು. ಮುಪ್ಪಿನಲ್ಲೂ, ಜೀವನದ ಪ್ರತಿಯೊಂದು ಘಳಿಗೆಯನ್ನೂ ಸಂತೋಷದಿಂದ ಆಸ್ವಾದಿಸುತ್ತಾ, ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ಪರಿಯನ್ನು ಗೋಪಾಲಯ್ಯ-ಶಂಕರಮ್ಮರಿಂದಲೇ ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ದತ್ತಾತ್ರೇಯ-ರಾಮೇಶ್ವರಿ ವರ್ಮ ಇವರುಗಳ ನಟನೆ ಬಹುಕಾಲ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ.

ಸಮಕಾಲಿನ ಎಲ್ಲಾ ಚಲನಚಿತ್ರಗಳಿಗಿಂತ ವಿಭಿನ್ನವಾಗಿ, ನೋಡುಗರ ಮನ ಮುಟ್ಟುವಂತೆ, ಅಗಾಧ ಹಾಗೂ ಸಮೃದ್ಧ ಕನ್ನಡ ಸಾಹಿತ್ಯವನ್ನು ಅಚ್ಚುಕಟ್ಟಾಗಿ ಕನ್ನಡ ಚಿತ್ರೋದ್ಯಮದ ಮೂಲಕ ಕನ್ನಡಿಗರಿಗೆ ಅರ್ಪಿಸಿರುವ ಸಾಹಸಕ್ಕಾಗಿ ಬಸಂತ್ ಪ್ರೊಡಕ್ಷನ್ಸ್ ಹಾಗೂ ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ವಾಣಿಜ್ಯ ಮಾರುಕಟ್ಟೆಯಲ್ಲಿ, ಬೆಟ್ಟದ ಜೀವದಂತಹ ಕಲಾತ್ಮಕ ಚಲನಚಿತ್ರವನ್ನು ಪ್ರದರ್ಶಿಸಲು ಮುಂದಾದ ಪಿ.ವಿ.ಆರ್., ಇನಾಕ್ಸ್, ಉಮಾ ಚಿತ್ರ ಮಂದಿರ ಹಾಗೂ ಇನ್ನಿತರೆ ಚಿತ್ರಪ್ರದರ್ಶಕರ ಉದಾರತೆಯನ್ನು ಮೆಚ್ಚಲೇಬೇಕು. ಇಂಥಹ ಉತ್ತಮ ಚಲನಚಿತ್ರಗಳನ್ನು ತಯಾರಿಸುವ ಮೂಲಕ ಕನ್ನಡ ನಾಡು-ನುಡಿಯ ಏಳಿಗೆಗಾಗಿ ಅಪಾರ ಸೇವೆಯನ್ನು ಸಲ್ಲಿಸಿದ ಶಿವರಾಮ ಕಾರಂತರಂತಹ ಮಹಾನ್ ಚೇತನಗಳಿಗೆ ಗೌರವ ಸಲ್ಲಿಸುವ ಪ್ರಯತ್ನಗಳು ಅವಿರತವಾಗಿ ಮುಂದುವರೆಯಲಿ ಎಂದು ಆಶಿಸುತ್ತೇನೆ.

ಪುಸ್ತಕ ಪರಿಚಯ
ಶೀರ್ಷಿಕೆ : ಬೆಟ್ಟದ ಜೀವ
ಸಾಹಿತಿ : ಡಾ|| ಕೆ. ಶಿವರಾಮ ಕಾರಂತ
ಪ್ರಕಾಶಕರು : ಎಸ್. ಬಿ. ಎಸ್. ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್, ಬೆಂಗಳೂರು - 1
ವಿತರಕರು : ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - 9
ಬೆಲೆ : ರೂ. 65/-
ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗಳನ್ನು ಶ್ರೀಮಂತಗೊಳಿಸುವ ಎಲ್ಲಾ ಪ್ರಯತ್ನಗಳಿಗೆ, ಕನ್ನಡಿಗರಾದ ನಾವೆಲ್ಲರೂ ಪ್ರಾಮಾಣಿಕವಾಗಿ ಬೆಂಬಲಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

3 comments:

  1. ಇದನ್ನು bookmark ಮಾಡ್ಕೊಂಡಿದ್ದೀನಿ ಪ್ರಶಾಂತ. ಓದಬೇಕು.. ಸಧ್ಯಕ್ಕೆ ಮೂಕಜ್ಜಿಯ ಕನಸುಗಳು ಓಡುತಿದ್ದೇನೆ. ನಮ್ಮ ಜೀವನದಲ್ಲಿ ಸಮಯದ ಅಭಾವ. ಕೆಲಸದ ಸಮಯ ಹಾಗು ಮಗು ಎರಡೂ ನನ್ನ ಓದುವ ಆಸಕ್ತಿಯನ್ನು ಬೆಂಬಲಿಸುತ್ತಿಲ್ಲ. ಖುಷಿಯಾಯಿತು ನಿಮ್ಮ ಈ ರಸವತ್ತಾದ review ಓದಿ.
    ಈ ಮುಂಚೆ ಆ.ರಾ. ಮಿತ್ರಾ ಅವರ "ನಾನೇಕೆ ಕೊರೆಯುತ್ತೇನೆ?" ಎಂಬ ಪ್ರಭಂಧಗಳ ಸಂಕಲನ ಓದಿದೇ. Pun ಇಷ್ಟ ಆಗೋದಾದ್ರೆ, ಹಾಸ್ಯ ಇಷ್ಟ ಆಗೋದಾದ್ರೆ ಇದು "MUST READ " ೨-೩ ಪುಟದ ಮೇಲೆ ಒಂದು ಪ್ರಭಂಧ ಇರಲ್ಲ. Continuity ನು ಬೇಡ.

    ReplyDelete
  2. Kanditha noduthini. tumba chennagi moodi bandide antha tumba reviews odidde..
    btw.. neevu saha cinema nodidirendu odhi ashcharyavayithu.. :P

    ReplyDelete
  3. ಸಹನಾ, ನಿಮ್ಮ ಅಸಹಾಯಕತೆ ನನಗೂ ಅರ್ಥ ಆಗುತ್ತೆ. ಜೀವನದ ಪ್ರತಿಯೊಂದು ಘಟ್ಟದಲ್ಲೂ ಒನ್ನೊಂದು ಯುದ್ಧವನ್ನು ಎದುರಿಸಿ ಗೆಲ್ಲಬೇಕಾದದ್ದು ಮಾನವನಿಗೆ ಅನಿವಾರ್ಯ. ಸಮಯ ಸಿಕ್ಕಾಗ ಓದಿ. ಬೆಟ್ಟದ ಜೀವ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ಪುಸ್ತಕಗಳಲ್ಲಿ ಒಂದು. 'ನಾನೇಕೆ ಕೊರೆಯುತ್ತೇನೆ?' ಪುಸ್ತಕವನ್ನು ಖಂಡಿತಾ ಕೊಂಡು ಓದುತ್ತೇನೆ; ಶಿಫಾರಸ್ಸಿಗೆ ಧನ್ಯವಾದಗಳು :o)

    ರಾಜು, ನಿಮ್ಮ ಬಿಡುವಿಲ್ಲದ ಜೀವನದಲ್ಲಿ ಬೆಟ್ಟದ ಜೀವ ಸಿನಿಮಾ ನೋಡಲು ಸಮಯವಾದರೆ ಒಳಿತು. ಕಾದಂಬರಿಯನ್ನು ಓದಿಕೊಂಡಿದ್ದರೆ ಮತ್ತೂ ಅಧ್ಬುತ. ನಾನು ಸಿನಿಮಾ ನೋಡುವವನಲ್ಲ; ಸರಿ. ಆದರೆ, ಕಲಾತ್ಮಕ ಕನ್ನಡ ಚಿತ್ರಗಳನ್ನು ಮಾತ್ರ ನೋಡಿಯೇ ತೀರುತ್ತೇನೆ. ನಿಮ್ಮ ಹಾಗೆಯೇ, ನನ್ನ ಮನೆಯವರಿಗೂ ನಾನು ಸಿನಿಮಾ ವೀಕ್ಷಿಸಲು ಹೋಗುತ್ತೇನೆ ಎಂದು ಹೇಳಿದಾಗ ಪರಮಾಶ್ಚರ್ಯ!! ನನ್ನಾಕೆಗೆ ಕನ್ನಡ ಅಷ್ಟಾಗಿ ಅರ್ಥವಾಗದ ಕಾರಣ ಸಿನಿಮಾಕ್ಕೆ ನಾನೊಬ್ಬನೇ ಹೋಗಿ ಬರುವಂತಾಯಿತು. ಸಾಧ್ಯವಾದರೆ, ದಂಪತಿಗಳಿಬ್ಬರೂ ಹೋಗಿಬನ್ನಿ; ಸೂಕ್ಷ್ಮವಾಗಿ ಗಮನಿಸಿದರೆ, ದಾಂಪತ್ಯ ಜೀವನದ ಸಾರವನ್ನೇ ಚಲನಚಿತ್ರದಲ್ಲಿ ಕಾಣುತ್ತೀರಿ :o)

    ಈ ಮಧ್ಯೆ ನನ್ನದೊಂದು ಬಿನ್ನಹ. ಮುಂಬರುವ ಕನ್ನಡ ರಾಜ್ಯೋತ್ಸವದ ಪ್ರಯುಕ್ತ, ಕನ್ನಡ ನಾಡು-ನುಡಿಯ ಬಗೆಗಿನ ನಮ್ಮ ಹೆಮ್ಮೆಯನ್ನು ಬಿಂಬಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುವ ಆಶಯ ನನ್ನದು. ಉತ್ಸುಕರಾಗಿದ್ದಲ್ಲಿ ದಯಮಾಡಿ ನನಗೆ ಬರೆಯಿರಿ (PACCHIEE at GMAIL), ನನ್ನ ಮನಸ್ಸಿನಲ್ಲಿ ಮೂಡಿರುವ ಆಲೋಚನೆಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ.

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!