Wednesday, June 12, 2013

ಅಗಲಿದ ಗುರುವಿಗೆ ನುಡಿನಮನ - ಡಾ. ಕೆ. ಜಯಕುಮಾರ್

19ನೇ ಏಪ್ರಿಲ್ 2013ರ ಸಂಜೆ; ಕಾಲೇಜಿನಿಂದ ಮನೆಗೆ ಹಿಂತಿರುಗಿದವನೇ laptop ಮುಂದೆ ಕುಳಿತು, ಕರ್ನಾಟಕ ಪಶುವೈದ್ಯಕೀಯ ಸಂಘದ ಬಳಕೆಗಾಗಿ Online Web Application ಅಭಿವೃದ್ಧಿಪಡಿಸುವುದರಲ್ಲಿ ಗಾಢವಾಗಿ ತಲ್ಲೀನನಾಗಿದ್ದೆ. ಹಾಸಿಗೆಯ ಮೇಲಿದ್ದ ನನ್ನ mobile ಕೀರಲು ಧ್ವನಿಯಲ್ಲಿ ಸದ್ದುಮಾಡತೊಡಗಿತು - ಅದು ಗುರುಗಳಾದ ಡಾ. ಎಂ. ನಾರಾಯಣಸ್ವಾಮಿಯವರಿಂದ ಬರುತ್ತಿದ್ದ ಕರೆ, ತಕ್ಷಣ ಉತ್ತರಿಸಿದೆ:
"ನಮಸ್ತೆ, ಸರ್.."
"ಪ್ರಶಾಂತ್, college magazine ಗೆ ಏನಾದ್ರೂ ಬರೀತಿದ್ದೀಯ?"
ಸ್ವಲ್ಪ ಹಿಂಜರಿಕೆಯಿಂದಲೇ "ಬರೆಯೋ idea ಏನೂ ಇಲ್ಲ ಸರ್.." ಎಂದಿದ್ದೆ.
"ಒಂದು ಅರ್ಧ ಪುಟದಷ್ಟು ಏನಾದ್ರೂ ಬರೀಬಹುದಲ್ವಾ?"
ತಲೆಯ ತುಂಬೆಲ್ಲಾ ಪ್ರೊಗ್ರಾಮಿಂಗ್ ಕೋಡ್-ಗಳೇ ತುಂಬಿಕೊಂಡಿದ್ದ ನನಗೆ ಆ ಹೊತ್ತಿಗೆ ಲೇಖನ ಬರೆಯುವ ಸಂಯಮ ಇರಲಿಲ್ಲ; ಏನು ಉತ್ತರಿಸಬೇಕೋ ನನಗೆ ತಿಳಿಯದೇ ಹೋಯಿತು.

ಅಂದಿಗೆ ಎರಡು ದಿನಗಳ ಹಿಂದೆಯಷ್ಟೇ ನಮ್ಮನ್ನಗಲಿದ್ದ ಗುರುಗಳಾದ ಡಾ. ಕೆ. ಜಯಕುಮಾರ್ ಅವರಿಗೆ ಗೌರವ ಸಲ್ಲಿಸುವ ಲೇಖನ ಬರೆಯುವ ಸಲುವಾಗಿ ಮನಸ್ಸಿಗೆ ನಾಟಿದ ಕೆಲವು ವಿಷಯಗಳನ್ನು ಮರೆಯಬಾರದೆಂಬ ಕಾರಣಕ್ಕಾಗಿ ಇದೇ ಬ್ಲಾಗ್ ನಲ್ಲಿ ಬೆರಳಚ್ಚಿಸಿ ಕರಡಿಗೆ ಸೇರಿಸಿದ್ದೆ. ಹೆಚ್ಚು ಆಲೋಚಿಸದೇ, ಕರಡನ್ನು ತಿದ್ದಿ, ಪುಟ್ಟ ಲೇಖನವೊಂದನ್ನು ಮರುದಿನ ಕಾಲೇಜಿನ ಸಂಪಾದಕೀಯ ತಂಡಕ್ಕೆ ಸಲ್ಲಿಸಿದೆ. "ಪತ್ರಿಕೆ-ಪ್ರಕಟಣೆ" ಎಂದಾಕ್ಷಣ ಅದೇಕೋ ಒಂದು ಸಣ್ಣ ಅಳುಕು ನನ್ನೊಳಗೆ ಮೂಡುತ್ತದೆ; ಇಲ್ಲಿಯೂ ಹಾಗೆಯೇ - "ನನ್ನ ಲೇಖನವು ಪ್ರಕಟಣೆಗೆ ಯೋಗ್ಯವೇ?" ಎಂಬ ಪ್ರಶ್ನೆ ಕಾಡತೊಡಗಿತು.


2013ರ ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದ ವಾರ್ಷಿಕ ಸಂಚಿಕೆ "ಬಿಂಬ" ಇಂದು ಹಲವರ ಕೈಸೇರಿದೆ; ಅದರಲ್ಲಿ ಪ್ರಕಟವಾಗಿರುವ ನನ್ನ ಲೇಖನವು ಇಲ್ಲಿದೆ. ಇದಕ್ಕೆ ಮೂಲಭೂತವಾಗಿ ಕಾರಣಕರ್ತರಾದ ಗುರುಗಳು, ಡಾ. ಎಂ. ನಾರಾಯಣಸ್ವಾಮಿಯವರಿಗೆ ತುಂಬುಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ.
17-04-2013

ಎಂದಿನಂತೆ ಅಂದೂ ಸಹ ಕಾಲೇಜಿಗೆ ತಡವಾಗಿಯೇ ತಲುಪಿ, ವಾಹನ ನಿಲುಗಡೆ ಸ್ಥಳದಿಂದ ಗಡಿಬಿಡಿಯಲ್ಲಿ ಬೋಧನಾ ಕೊಠಡಿ ಸಂಖ್ಯೆ – 2 ರ ಕಡೆಗೆ ಹೆಜ್ಜೆ ಹಾಕುತ್ತಿದ್ದೆ. ಆ ಹೊತ್ತಿಗಾಗಲೇ 5 ನಿಮಿಷ ತಡವಾಗಿದ್ದುದರಿಂದ ಸಮಯಕ್ಕೆ ಮುಂಚಿತವಾಗಿ ಅಥವಾ ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಬೇಕೆಂಬ ನನ್ನ ಬಹುದಿನಗಳ ಆಕಾಂಕ್ಷೆಗೆ ಎಳ್ಳು-ನೀರು ಬಿಟ್ಟಂತಾಗಿತ್ತು. ಗುರುಗಳಾದ ಡಾ. ಜಯಕುಮಾರ್ ಅವರು ಬೋಧನಾ ವಿಷಯವಾಗಿ ಅಂದು ನಮ್ಮೊಡನೆ ಚರ್ಚಿಸಬಹುದಾದ ಪ್ರಚಲಿತ ವಿದ್ಯಮಾನಗಳನ್ನು ಅಂದಾಜಿಸಿಕೊಳ್ಳುವ ನನ್ನ ಪ್ರಯತ್ನವು ಫಲಕಾರಿಯಾಗಲಿಲ್ಲ. ನನ್ನ ಸಂಕುಚಿತ ಚಿಂತನೆಗೆ ಅವರ ವಿಶಾಲ ವ್ಯಕ್ತಿತ್ವ-ವಿಚಾರಗಳನ್ನು ಇಡಿಯಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರಲಿಲ್ಲ.

ದಾರಿಯಲ್ಲಿ ಭೇಟಿಯಾದ ದೈಹಿಕ ಶಿಕ್ಷಣ ಶಿಕ್ಷಕರ ಮುಖದಲ್ಲಿ ಎಂದಿನ ನಗು ಕಾಣದಿದ್ದರಿಂದ ನಾನು –
"ನಮಸ್ತೆ ಮೇಡಂ; ಏನು.. ತುಂಬಾ ಸೀರಿಯಸ್ಸಾಗಿ ಕಾಣ್ತಿದ್ದೀರ?" ಎನ್ನುತ್ತಾ ಮಾತಿಗೆಳೆದೆ.
"ನಿಮ್ಗೆ ಗೊತ್ತಿಲ್ವಾ? ಅವ್ರು, ಪ್ರೊಫೆಸರ್ ತೀರ್ಕೊಂಡ್ರಂತೆ.." ಎಂದು ಅವರು ಉತ್ತರಿಸಿದಾಗ ಅವರ ಮುಖದಲ್ಲಿದ್ದ ಗಂಭೀರತೆಯ ಕಾರಣದ ಅರಿವಾಗತೊಡಗಿತು.
"ಯಾವ್ ಪ್ರೊಫೆಸರ್?" ಮರುಪ್ರಶ್ನಿಸಿದೆ.
"ಅವ್ರೇ.. ಡಾ. ಜಯ......" ಹೆಸರನ್ನು ಮರೆತಂತೆ ಕಂಡ ಅವರ ಮಾತನ್ನು ತಡೆದು ನಾನು "ಯಾವ್ ಡಿಪಾರ್ಟಮೆಂಟ್ ಹೇಳಿ.." ಎಂದು ಕೇಳಿದೆ.
"ಇದು.. ಫಾರ್ಮಕಾಲಜಿ.."
"ಹೆಚ್. ಒ. ಡಿ. ಅವ್ರ??"
"ಹ್ಹೂ.... ಅವ್ರೆ.."
"ಡಾ. ಜಯಕುಮಾರ್..??"
"ಹಾ.. ಡಾ. ಜಯಕುಮಾರ್.. ಅವ್ರೇ.. ಹಾರ್ಟ್ ಅಟ್ಯಾಕ್ ಆಯ್ತಂತೆ.."
"ನಮ್ಗೆ ಅವ್ರ ಕ್ಲಾಸಿತ್ತಲ್ಲ ಒಂಬತ್ತು ವರೆಗೆ.." – ಈ ಮಾತುಗಳನ್ನು ನನಗರಿವಿಲ್ಲದಂತೆಯೇ ಆಡಿದ್ದೆ; ಅದಕ್ಕವರು ಪ್ರತಿಕ್ರಿಯಿಸಲೂ ಇಲ್ಲ. ಬಂದೆರಗಿದ ಆಘಾತಕರ ಸುದ್ದಿಯಿಂದ 'ವಿಧಿಯ ಕರೆಗೆ ಕಾಲೇಜಿನ ತರಗತಿಗಳು ತಡೆಯೊಡ್ಡಲಾರವು' ಎಂಬ ವಾಸ್ತವವನ್ನು ನಾನು ಮರೆತಿದ್ದೆ.

ಡಾ. ಕೆ. ಜಯಕುಮಾರ್
ಹಾಗೆಯೇ ನಡೆದು, ನಾವು ಕಾಲೇಜಿನ ಮುಖ್ಯಪ್ರಾಂಗಣವನ್ನು ಸಮೀಪಿಸುತ್ತಿದ್ದಂತೆಯೇ ಅಲ್ಲಿ ಆಗಲೇ ನಮ್ಮನ್ನಗಲಿದ ಡಾ. ಜಯಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಪ್ರಾಂಶುಪಾಲರಾದಿಯಾಗಿ ಬಹುತೇಕ ಎಲ್ಲ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು, ಸಿಬ್ಬಂದಿ ಮುಂತಾದವರು ನೆರೆದಿದ್ದರು; ನಿಧಾನವಾಗಿ ಹೆಜ್ಜೆ ಹಾಕುತ್ತಾ ಗುಂಪಿನಲ್ಲಿ ಒಂದಾದೆ. ಪ್ರಾಂಶುಪಾಲರ ಮಾತುಗಳು ನಾನು ನಿಂತಿದ್ದ ಅಂತರಕ್ಕೆ ತಲುಪುವುದು ಕಷ್ಟಸಾಧ್ಯವಾಗಿದ್ದರಿಂದ, ಅಸ್ಪಷ್ಟವಾಗಿ ಕೇಳಿಸುತ್ತಿದ್ದ ಕೆಲವೊಂದು ಪದಗಳನ್ನು ಆಲಿಸುತ್ತಾ ತಲೆತಗ್ಗಿಸಿ ನಿಂತೆ. ತರಗತಿಯಲ್ಲಿ ಕುಳಿತು ಡಾ. ಜಯಕುಮಾರ್ ಮಾಸ್ತರ ಉಪನ್ಯಾಸ ಕೇಳುವ ಬದಲಾಗಿ ಕಾಲೇಜಿನ ಪ್ರಾಂಗಣದಲ್ಲಿ, ಉರಿಬಿಸಿಲಿನ ಸೂರಿನಡಿ ನಿಂತು ಅದೇ ಮಾಸ್ತರ ಅಗಲಿದ ಆತ್ಮಕ್ಕೆ ಶಾಂತಿ ಕೋರುತ್ತಾ ಮೌನಾಚರಣೆ ಮಾಡುವ ದೌರ್ಭಾಗ್ಯ ತಂದೊದಗಿಸಿದ ವಿಧಿಯನ್ನು ಮೌನವಾಗಿ ಶಪಿಸಿಕೊಳ್ಳುತ್ತಿದ್ದೆ.

ಎರಡು ನಿಮಿಷ ಮೌನಾಚರಣೆಯ ನಂತರ ಎಲ್ಲರೂ ಚದುರಿದರು; ಅಂದು ಯಾವುದೇ ತರಗತಿಗಳು ನಡೆದಂತೆ ಕಾಣಲಿಲ್ಲ. ನಾನು ಅಲ್ಲಿಂದ ನೇರವಾಗಿ ಬಳ್ಳಾರಿ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಯು. ಎ. ಎಸ್. ವಸತಿಗೃಹಗಳ ಆವರಣದತ್ತ ತೆರಳಿದೆ. ಮುಖ್ಯದ್ವಾರ ಪ್ರವೇಶಿಸಿದ ನಂತರ, ಅಲ್ಲಿ ನೆರೆದಿದ್ದ ವಾಹನ-ಜನರ ಜಾಡನ್ನನುಸರಿಸಿಕೊಂಡು ಹೋದ ನಾನು ಕೆಲವೇ ನಿಮಿಷಗಳಲ್ಲಿ ಡಾ. ಜಯಕುಮಾರ್ ಮಾಸ್ತರ ನಿವಾಸ ತಲುಪಿದ್ದೆ. ಆ ಹೊತ್ತಿಗಾಗಲೇ ಅಗಲಿದ ಗುರುಗಳ ಅಂತಿಮ ದರ್ಶನ ಪಡೆಯಲು ಅನೇಕ ವಿದ್ಯಾರ್ಥಿಗಳು ಆಗಮಿಸಿದ್ದರು; ನೂರಾರು ಮಂದಿ ಒಂದೇ ಸ್ಥಳದಲ್ಲಿದ್ದರೂ ಸಹ 'ಸ್ಮಶಾನ ಮೌನ' ನೆಲೆಸಿತ್ತು.

ಮನೆಯಂಗಳದಲ್ಲಿದ್ದ ಚೆಂದದ ಕೈದೋಟದ ಬದಿಯಲ್ಲಿ ಪಾದರಕ್ಷೆಗಳನ್ನು ಬಿಟ್ಟು, ನಿಧಾನವಾಗಿ ಸಾಗುತಲಿದ್ದ ಸಾಲಿನಲ್ಲಿ ಸೇರಿಕೊಂಡೆ. ಮನೆಯೊಳಗೆ ಜನಸಂದಣಿ ದಟ್ಟವಾಗಿದ್ದು, ಸಾಲಿನಲ್ಲಿ ಒಬ್ಬರಂತೆ ನಡೆದುಹೋಗಬಹುದಾದಷ್ಟು ಮಾತ್ರವೇ ಸ್ಥಳಾವಕಾಶವಿತ್ತು. ಎದೆಯನ್ನು ಭಾರವಾಗಿಸಿದ್ದ ನೋವಿನ ಕಳೆ ಅಲ್ಲಿದ್ದವರ ಮುಖದಲ್ಲಿಯೂ ಗೋಚರಿಸುತ್ತಿತ್ತು; ದುಃಖವು ಜಿಹ್ವೆಯನ್ನು ಮಡುಗಟ್ಟಿಸಿ ಮಾತುಗಳನ್ನು ಮರೆಸಿಬಿಟ್ಟಿತ್ತು. ಒಂದು ಕ್ಷಣ ಆ ನೀರವತೆ ಹಿತವೆನಿಸಿದರೂ, ಅದರ ಕಾರಣವು ಮಾತ್ರ ಅತ್ಯಂತ ಕರಾಳವಾಗಿದ್ದಿತು. ಸಮಯ ಸುಮಾರು ಹತ್ತು ಘಂಟೆ; ಕಾಲೇಜಿನ ಕೊಠಡಿಯ ತರಗತಿಯಲ್ಲಿರಬೇಕಿದ್ದ ಗುರುಗಳು ಶೀತಲ ಪೆಟ್ಟಿಗೆಯೊಳಗೆ ಚಿರನಿದ್ರೆಗೆ ಜಾರಿದ್ದರು, ಅವರ ನಿದ್ರೆಗೆ ಭಂಗ ಬಾರದಂತೆ ಸುತ್ತಲೂ ನಿಶ್ಶಬ್ಧತೆ ನೆಲೆಸಿತ್ತು. ಸರತಿಯ ಸಾಲಿನಲ್ಲಿ ಸುತ್ತು ಬಂದು ಗುರುಗಳ ದಿವ್ಯಚರಣಗಳಿಗೆ ಮನದಲ್ಲೇ ಸಾಷ್ಟಾಂಗ ನಮಿಸುವ ಹೊತ್ತಿಗೆ ಕಣ್ಣಂಚು ತೇವಗೊಂಡಿತ್ತು.

ಒಂದು ತಾಸಿನ ನಂತರ ಕಾಲೇಜಿನ ಮುಖ್ಯದ್ವಾರದ ಬಳಿ ಡಾ. ಜಯಕುಮಾರ್ ಮಾಸ್ತರ ಪಾರ್ಥಿವ ಶರೀರ ಆಗಮಿಸಿದಾಗ ಅನೇಕರು ಅವರ ಅಂತಿಮ ದರ್ಶನ ಪಡೆದರು. ಅಲ್ಲೇ ತುಸು ಅಂತರದಲ್ಲಿ ನಿಂತಿದ್ದ ನನ್ನ ಕರಣಗಳಲ್ಲಿ 'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ..' ಎಂಬ ಪುರಂದರದಾಸರ ಸಾಲುಗಳು ಎಲ್ಲಿಂದಲೋ ತೇಲಿಬರುತ್ತಿದ್ದಂತೆ ಭಾಸವಾಗುತ್ತಿತ್ತು. "ಹೆಚ್. ಒ. ಡಿ. ಆದ್ಮೇಲೆ ಕಾಲೇಜ್ಗೆ ಬಾ.. ಬಾ..  ಅಂತ ತುಂಬಾ ಕರೀತಿದ್ರು; ಇವತ್ತು ಬಂದು ಡಿಪಾರ್ಟ್‍ಮೆಂಟ್ ನೋಡ್ದೆ. ಎಲ್ಲಾ ಚೆನ್ನಾಗಿದೆ.. ಆದ್ರೆ ನಮ್ಮಣ್ಣನೇ ನಮ್ಜೊತೆ ಇಲ್ಲ.." - ಡಾ. ಜಯಕುಮಾರ್ ಮಾಸ್ತರ ಸಹೋದರಿ ಪರಿಚಯಸ್ಥರೊಡನೆ ಹೇಳಿಕೊಳ್ಳುತ್ತಿದ್ದ ಈ ಮಾತುಗಳು ಮನಸ್ಸನ್ನು ನಾಟಿದವು.

"ಸರಿಸುಮಾರು ಆರೇಳು ವರ್ಷಗಳ ನನ್ನ ಪಶುವೈದ್ಯಕೀಯ ಕಾಲೇಜಿನ ಜೀವನದಲ್ಲಿ ಅನೇಕ ರೀತಿಯ ಸಿಹಿ-ಕಹಿ ಅನುಭವಗಳನ್ನುಂಡಿದ್ದೇನೆ; ಆದರೆ, ತರಗತಿಗೆಂದು ಬಂದು ಗುರುಗಳ ಸಾವಿನ ಸುದ್ದಿಯನ್ನು ಕೇಳುವ ದುರಂತವನ್ನೆಂದೂ ಕಂಡಿರಲಿಲ್ಲವಲ್ಲ! ವಿದ್ಯೆ ಕಲಿಸಿದ ಗುರುಗಳನ್ನು ದೈವಸಮಾನರೆಂದು ಪರಿಗಣಿಸಿ, ಅವರಲ್ಲಿರಬಹುದಾದ ವಿಶೇಷ ಗುಣಗಳನ್ನೇ ಜೀವನದ ಮೌಲ್ಯ-ಆದರ್ಶವಾಗಿಸಿಕೊಂಡ ಅನೇಕ ವಿದ್ಯಾರ್ಥಿಗಳಿಗೆ ಇಂತಹ ಘಟನೆಗಳು ಭಾವನಾತ್ಮಕವಾಗಿ ಘಾಸಿಗೊಳಿಸದೇ ಇರಲಾರವು. ಸುರಕ್ಷತೆಗೆ ಹೆಸರಾಗಿದ್ದ ನನ್ನೂರು ಉದ್ಯಾನನಗರಿಯ ಹೃದಯಭಾಗ ಮಲ್ಲೇಶ್ವರಂನಲ್ಲಿ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿದ ಉಗ್ರರು ಶಕ್ತಿಶಾಲಿ ಬಾಂಬ್ ಸ್ಫೋಟಿಸುವಲ್ಲಿ ಯಶಸ್ಚಿಯಾದರಲ್ಲ.. ಇದು ಈ ದಿನದ ಮತ್ತೊಂದು ದುರಂತವೇ ಸರಿ.." - ಹೀಗೆ ನಿರಂಕುಶವಾಗಿ ಹರಿದಾಡುತ್ತಿದ್ದ ನನ್ನ ವಿಚಾರಲಹರಿಗಳಿಗೆ ಹಾಗೂ ಅಲ್ಲಿನ ಮೌನದ ಅಟ್ಟಹಾಸಕ್ಕೆ ಕಡಿವಾಣ ಹಾಕಿದ ಕುಮಾರ್ ಆಂಬ್ಯುಲೆನ್ಸ್ ಕೆಎ-ಇಪ್ಪತ್ತೈದು, ಅರವತ್ತಾರು ಸೊನ್ನೆ ಸೊನ್ನೆ ಸಂಖ್ಯೆಯ ವಾಹನದಲ್ಲಿ ಡಾ. ಜಯಕುಮಾರ್ ಮಾಸ್ತರ ವೈಕುಂಠ ಯಾತ್ರೆ ನಮ್ಮ ಶೈಕ್ಷಣಿಕ-ಸಾಮಾಜಿಕ ಬದುಕಿನಲ್ಲಿ ಶೂನ್ಯವನ್ನು ಸೃಷ್ಟಿಸಿ, ನಿಧಾನವಾಗಿ ದೂರ ಸಾಗಿತ್ತು...

- ಪ್ರಶಾಂತ್ ಸಿ.

(ಈ ಲೇಖನವನ್ನು ನುಡಿ ತಂತ್ರಾಂಶದ ASCII ಸ್ವರೂಪದಿಂದ UNICODE ಗೆ ಪರಿವರ್ತಿಸಲು ಹಳ್ಳಿಮನೆ ಅರವಿಂದ ಅವರ ASCII2UNICODE ತಂತ್ರಾಂಶ ಬಳಸಲಾಗಿದೆ)

12 comments:

  1. ಗುರುವಿನ ನಮನ ತುಂಬಾ ಚೆನ್ನಾಗಿ ಮೂಡಿಬಂದಿದೆ.

    http://badari-poems.blogspot.in

    ReplyDelete
    Replies
    1. ಬದರಿ ಸರ್, ನಿಮ್ಮ ಪ್ರೋತ್ಸಾಹದಾಯಕ ಅನಿಸಿಕೆಗೆ ಧನ್ಯವಾದ.

      Delete
  2. ಸುಂದರ ಬರವಣಿಗೆ. ಡಾ.ಜಯಕುಮಾರ್ ನನಗೆ ಮುವ್ವತ್ತೆರಡು ವರ್ಷಗಳಿಂದ ಪರಿಚಯ. ನಮ್ಮ ಕಾಲೇಜಿನ ದಿನಗಳಲ್ಲಿ ನಮ್ಮದೊಂದು ವೈಚಾರಿಕ ಗೆಳೆಯರ ಬಳಗವೇ ಇತ್ತು. ಅವರು ಗೆಳೆಯರ ಬಳಗದಲ್ಲೂ ಶೂನ್ಯವನ್ನು ಸೃಷ್ಟಿಸಿ ಅಗಲಿದ್ದಾರೆ.
    ಜೆ.ಬಾಲಕೃಷ್ಣ
    http://antaragange.blogspot.in

    ReplyDelete
    Replies
    1. ಸರ್, ಮೊದಲನೆಯದಾಗಿ ನನ್ನ ಈ ಪುಟ್ಟ ಬ್ಲಾಗ್ ಪ್ರಪಂಚಕ್ಕೆ ನಿಮಗೆ ಆತ್ಮೀಯ ಸ್ವಾಗತ; ನಿಮ್ಮ ಆಗಮನದಿಂದ ಹೊಸದೊಂದು ಛಾಪು ಮೂಡಿದೆ. ಡಾ. ಜಯಕುಮಾರ್ ಅವರ ವ್ಯಕ್ತಿತ್ವವೇ ಅಂಥದ್ದು.. ಊಹೆಗೂ ನಿಲುಕದ್ದು; ಅವರ ಅನಿರೀಕ್ಷಿತ ಅಗಲಿಕೆ ಎಲ್ಲರಲ್ಲೂ ಶೂನ್ಯ ಭಾವನೆ ಮೂಡಿಸಿದೆ..

      Delete
  3. sad demise of a professor. May his soul rest in peace.
    sudden departure saddens me.
    Incidentally I am Pharmacologist
    Dr AM Shivakumar

    ReplyDelete
    Replies
    1. Shivakumar Sir, welcome to my Blog! Yes, it is very sad for having lost such an intellectual person from the midst. Good to know that you are a Pharmacologist too..

      Delete
  4. Let his great soul Rest in peace...
    Very heart touching Prashanth, Gurugalu namma life nalli bahala bele kodtivi antavru heege mayavadre bahala dodda aghatave sari.

    ReplyDelete
    Replies
    1. Ramya, thanks so much for your prayers.. ನಿಮ್ಮ ಮಾತು ನಿಜ .. ಗುರುಗಳ ಅಗಲಿಕೆಯ ಆಘಾತದಿಂದ ಹೊರಬರಲು ಇನ್ನೂ ಸಾಧ್ಯವಾಗಿಲ್ಲ. ಪ್ರತೀ ಬುಧವಾರ 9:30ರ ತರಗತಿಯಲ್ಲಿ ಕುಳಿತಾಗ ಅವರದ್ದೇ ನೆನಪು ಕಾಡುತ್ತದೆ..

      Delete
  5. Agalida Gurugala aathmakke shanthi doreyali.. avru nadesi hoda aadarshada jeevana nammellarige spoorthi tumbali..

    ReplyDelete
    Replies
    1. ರಾಜು, ಖಂಡಿತಾ.. ಆದರ್ಶ ಗುರುಗಳ ಜೀವನವೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ. ನಿಮ್ಮ ಪ್ರಾರ್ಥನೆ ಸಾರ್ಥಕಗೊಳ್ಳಲಿ..

      Delete
  6. It is a very good obituary. I didnt know Prof Jayakuamr. Had you in your grief briefly described what you felt about the person whom all of us lost,the article could have been more touching.

    Good work Prashanth. Keep it up.

    I dont typing in Kannada and ehnce the response in English

    Manjunath L H, SKDRDP

    ReplyDelete
    Replies
    1. Sir, firstly I would like to extend a warm welcome to my Blog sphere. Vets having an association with the College for at least 3 decades now know Dr. Jayakumar very well; guess you are too senior.

      Dr. T. S. Ramananda Sir had been discussing with us about the incredible service you have been rendering to the society through SKDRDP, it's pride to be a Vet when seniors like you are doing wonders in the society. We had a plan to meet you in June last year but somehow we couldn't. Am very happy to see you here in my Blog and comment on my short writeup. Thank you very much Sir..

      Delete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!